ಪ್ರಶ್ನೋತ್ತರ ಪ್ರಪಂಚ

ಕೆಲವು ದೇವರ ಪೂಜಾ ಸಂದರ್ಭಗಳಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ತಿನ್ನಬಾರದೆನ್ನುತ್ತಾರೆ ಏಕೆ?
ಈ ಪ್ರಶ್ನೆಯನ್ನು ಕೇಳಿದರೆ ಒಬ್ಬೊಬ್ಬರ ಮಾತಿನಲ್ಲೂ ಒಂದೊಂದು ರೀತಿಯ ಉತ್ತರ ಬರುತ್ತದೆ. ಆದರೆ ಹೆಚ್ಚಾಗಿ ಕೇಳಿಬರುವ ಉತ್ತರವೆಂದರೆ ಈರುಳ್ಳಿ ಹಾಗೂ ಬೆಳ್ಳುಳ್ಳಿ ಮಾಂಸಾಹಾರವೆಂದು. ಆದರೆ ನಿಜವಾದ ಕಾರಣವೆಂದರೆ, ಈರುಳ್ಳಿ ಹಾಗೂ ಬೆಳ್ಳುಳ್ಳಿ ಎರೆಡೂ ಕಾಮೋತ್ತೇಜಕಗಳು. ಆದುದರಿಂದ ಪೂಜಾ ಹಾಗೂ  ವ್ರತಗಳ ಸಂದರ್ಭಗಳಲ್ಲಿ ಈರುಳ್ಳಿಯನ್ನು ಹಾಗೂ ಬೆಳ್ಳುಳ್ಳಿಯನ್ನು ಸೇವಿಸಬಾರದೆನ್ನುತ್ತಾರೆ.

ಈಶ್ವರ ಹಾಗೂ ನಂದಿಯ ನಡುವೆ ನಡೆಯಬಾರದು ಎನ್ನಲಾಗುತ್ತದೆ ಏಕೆ?
ನಂದಿ ಈಶ್ವರನ ಪರಮಭಕ್ತ. ಸದಾಕಾಲವೂ ನಂದಿಯು ಈಶ್ವರನನ್ನು ದರ್ಶಿಸುತ್ತಾ ಧ್ಯಾನಿಸುತ್ತಿರುತ್ತಾನೆ ಹಾಗೂ ಶಿವನೂ ಸಹ ತನ್ನ ಭಕ್ತಾಗ್ರಣ್ಯನಾದ ನಂದಿಯನ್ನು ವೀಕ್ಷಿಸುತ್ತ ತನ್ನ ಕರುಣಾಪೂರಿತ ಅನುಗ್ರಹವನ್ನು ತೋರುತ್ತಿರುತ್ತಾನೆ. ಆದುದರಿಂದ ಇವರೀರ್ವರ ನಡುವೆ ನಡೆದು ಅವರ ಪರಸ್ಪರ ಭಕ್ತಿ ಹಾಗೂ ಅನುಗ್ರಹಕ್ಕೆ ಧಕ್ಕೆಯುಂಟುಮಾಡಿದರೆ, ಅವರೀರ್ವರ ಕೋಪಕ್ಕೆ ತುತ್ತಾಗಬಹುದೆಂಬ ಕಾಳಜಿಯಿಂದ ಹೀಗೆ ಹೇಳಲಾಗುತ್ತದೆ. 
ಸುಬ್ರಮಣ್ಯ ಮೂಲಮಂತ್ರಗಳು
ಓಂ ಶಂ ಶರವಣಭವಾಯ ನಮ:
ಓಂ ಶ್ರೂಂ ಸ್ಕಂದಾಯ ನಮ:
ಓಂ ಶೌಂ ಸುಬ್ರಮಣ್ಯಾಯ ನಮ:
ಕುಮಾರ ಮೂಲಮಂತ್ರ
ಓಂ ಕ್ರೌಂ ಕುಮಾರಾಯ ನಮ:
ಗುಹ ಮೂಲಮಂತ್ರ
ಓಂ ಸೂಂ ಸ್ವಾಮಿನ್ ಗುಹಾಯಾಯ ನಮ:
ಶಣ್ಮುಖ ಮೂಲಮಂತ್ರ
ಓಂ ಹ್ರೀಂ ಶಂ ಶಣ್ಮುಖಾಯ ನಮ:
ವಲ್ಲಿ ಮೂಲಮಂತ್ರ 
ಓಂ ಶ್ರೀಂ ಮಹಾವಲ್ಲಾಯೈ ನಮ:
ದೇವಸೇನ ಮೂಲಮಂತ್ರ (ದೇವಸೇನ ಶ್ರೀ ಸುಬ್ರಮಣ್ಯ ಸ್ವಾಮಿಯ ಪತ್ನಿ)
ಓಂ ಹ್ರೀಂ ದೇವಸೇನಾಯೈ ನಮ:
ಮಯೂರ ಮೂಲಮಂತ್ರ  (ನವಿಲು-ಸುಬ್ರಮಣ್ಯ ಸ್ವಾಮಿಯ ವಾಹನ)
ಓಂ ಮ್ರೀಂ ಮಯೂರಾಯ ನಮ:
ದೇವರುಗಳು ಬಳಸುತ್ತಿದ್ದ ವಾಹನಗಳು
ಸೂರ್ಯ – ಏಳು ಕುದುರೆಗಳುಳ್ಳ ರಥ (7 Horses)
ಬ್ರಹ್ಮ – ಏಳು ಹಂಸಗಳು (Sevven Swans)
ದುರ್ಗಿ – ಸಿಂಹ ಮತ್ತು ಹುಲಿ (Lion and Tiger)
ಗಣೇಶ – ಇಲಿ (Big Mouse)
ಇಂದ್ರ – ಆನೆ (Elephant)
ಕಾರ್ತಿಕೇಯ ಅಥವಾ ಸುಬ್ರಮಣ್ಯ – ನವಿಲು (Peacock)
ಲಕ್ಷ್ಮಿ – ಗೂಬೆ (Owl)
ಸರಸ್ವತಿ – ಹಂಸ ಮತ್ತು ನವಿಲು (Swan and Peacock)
ಶಕ್ತಿ ಅಥವಾ ಶಿವ – ಗೂಳಿ (ವೃಷಭ) (Bull)
ಶನಿದೇವ – ಕಾಗೆ (Crow)
ಶೀತಲಾಂಬ ದೇವಿ – ಕತ್ತೆ (Donkey)
ಶಿವ – ನಂದಿ (ಗೂಳಿ) (Bull)
ವರುಣ – ಮೊಸಳೆ (Crocodile)
ವಾಯುದೇವರು – ಸಾವಿರ ಕುದುರೆಗಳು (Thousand Horses)
ವಿಷ್ಣುದೇವ – ಗರುಡ ಪಕ್ಷಿ, ಆದಿಶೇಷ (ಹಾವು) (Adishesha, Serpent)
ವಿಶ್ವಕರ್ಮ – ಆನೆ (Elephant)
ಯಮದೇವ – ಕೋಣ (Male Buffalo)
ಚಂದ್ರ – ಚಿಗರೆ (ಜಿಂಕೆಯ ಜಾತಿ) (Antelope)
ಕಾಮದೇವ – ಗಿಳಿ (Parrot)
ಅಗ್ನಿ – ಟಗರು (ಗಂಡು ಕುರಿ) (Ram)
ನೈವೇದ್ಯದ ತೆಂಗಿನಕಾಯಿಯನ್ನು ಇಡುವ ಬಗೆ ಹೇಗೆ?
ತೆಂಗಿನಕಾಯಿಯನ್ನು ನೈವೇದ್ಯವಾಗಿ ಇಡುವಾಗ ದೇವರಿಗೆ ಅಭಿಮುಖವಾಗಿ ಅಂದರೆ ಚಿಪ್ಪಿನ ಮುಖ ದೇವರಿಗೆ ಕಾಣುವಂತೆ ಹಾಗೂ ನಮಗೆ ಕಾಣದಂತೆ ಇಡಬೇಕು ಇದು ಶುಭ.
ಸ್ವರ್ಗ ಲೋಕದ ದೇವತಾ ವೃಕ್ಷಗಳೆಂದು ಹೆಸರಾದ ವೃಕ್ಷಗಳಾವುವು?
ಕಲ್ಪವೃಕ್ಷ, ಪಾರಿಜಾತ, ಮಂದಾರ, ಹರಿಚಂದನ, ಸಂತಾನ.
ದೇವತಾ ವೃಕ್ಷಗಳೆಂದು ಹೆಸರಾದ ಇತರೆ ವೃಕ್ಷಗಳಾವುವು?
ಕಪಿಥ್ಥ, ತುಳಸಿ, ನೆಲ್ಲಿ, ಆಲ, ಅಶ್ವತ್ಥ, ಬಿಲ್ವ, ಮುತ್ತುಗ, ಬೇವು, ಮೋದುಗ, ಅತ್ತಿ (ಔದುಂಬರ)
ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಏಕೆ?
ಭೂಮಿಯ ಅಯಸ್ಕಾಂತೀಯ ಶಕ್ತಿ ಅತ್ಯಂತ ಪ್ರಭಲವಾಗಿ ಉತ್ತರ ದಿಕ್ಕಿನ ಭಾಗದಲ್ಲಿಯೇ ಕೇಂದ್ರೀಕೃತಗೊಂಡಿರುತ್ತದೆ. ಒಂದೊಮ್ಮೆ ನಾವು ಉತ್ತರ ದಿಕ್ಕಿನೆಡೆ ತಲೆಹಾಕಿ ಮಲಗಿದಲ್ಲಿ ಪ್ರಭಲ ಅಯಸ್ಕಾಂತೀಯ ತರಂಗಗಳು ತಮ್ಮ ಮೆದುಳಿಗೆ ಹಾನಿಮಾಡಿ ಮಾನಸಿಕ ಸಮಸ್ಯೆಗಳು ತಲೆದೋರುತ್ತವೆ. ಇದರಿಂದ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು.
ಹೊಸ್ತಿಲ ಮೇಲೆ ಕುಳಿತುಕೊಳ್ಳಬಾರದು, ತುಳಿಯಬಾರದು ಏಕೆ?
ಮಹಾ ವಿಷ್ಣುವು ನರಸಿಂಹಾವತಾರವನ್ನು ತಾಳಿ ಹಿರಣ್ಯಕಷಿಪುವನ್ನು ಹೊಸ್ತಿಲ ಮೇಲೆ ಕುಳಿತೇ ಸಂಹರಿಸಿ ಪ್ರಹ್ಲಾದನಿಗೆ ಅಭಯವನ್ನಿತ್ತನು. ಅಂತಹ ಮಹಾವಿಷ್ಣುವಿನ ಸ್ಥಾನವೆಂದೇ ಪರಿಗಣಿಸಿ ಹೊಸ್ತಿಲಿಗೆ ಪಾವಿತ್ರ್ಯ ಸ್ಥಾನವನ್ನು ನೀಡಲಾಗಿದೆ. ಆದುದರಿಂದಲೇ ಹೊಸ್ತಿಲ ಮೇಲೆ ಕುಳಿತುಕೊಳ್ಳುವುದು ಹಾಗೂ ತುಳಿಯುವುದು ನಿಷಿದ್ದ. ಅಲ್ಲದೆ ಹೂಸ್ತಿಲನ್ನು ಸಾಕ್ಷಾತ್ ಲಕ್ಷ್ಮೀದೇವಿ ಎಂದೇ ಪರಿಗಣಿಸಲಾಗುತ್ತದೆಯಾದ್ದರಿಂದ ಹೊಸ್ತಿಲನ್ನು ತುಳಿಯುವುದು ಒದೆಯುವುದು ಮಾಡಬಾರದು.
ಹರಿದಿರುವ ಮತ್ತು ಒಣಗಿರುವ ವೀಳ್ಯದೆಲೆ ದೇವತಾ ಕಾರ್ಯಕ್ಕೆ ನಿಷಿದ್ದವೇ?
ಹೌದು, ವೀಳ್ಯದೆಲೆ ಭಿನ್ನವಾಗಿದ್ದರೆ, ಒಣಗಿದ್ದರೆ, ಬಾಡಿದ್ದರೆ ಅದು ದೇವತಾ ಕಾರ್ಯಗಳಿಗೆ ಬಳಸಬಾರದು. ವೀಳ್ಯದೇಲೆಯ ಅಗ್ರದಲ್ಲಿ ಲಕ್ಷ್ಮೀದೇವಿ, ಮಧ್ಯದಲ್ಲಿ ಸಾಕ್ಷಾತ್ ಪಾರ್ವತಿ ಮಾತೆ ಹಾಗೂ ತುದಿಯ ಭಾಗದಲ್ಲಿ ಸರಸ್ವತಿ ಎಂದೇ ಹೆಸರಾದ ವಿದ್ಯಾ ಲಕ್ಷೀಯರೇ ಅಸೀನರಾಗಿರುತ್ತಾರೆ ಅಲ್ಲದೇ ಸಾಕ್ಷಾತ್ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರೂ ಸಹ ವೀಳ್ಯದೆಲೆಯಲ್ಲಿನ ಭಾಗವಾಗಿರುತ್ತಾರೆ. ಆದುದರಿಂದಲೇ ಯಾವುದೇ ಶುಭಕಾರ್ಯದಲ್ಲಿಯೂ ವೀಳ್ಯದೆಲೆ ಅತಿ ಮಹತ್ವದ ಸ್ಥಾನಗಳಿಸಿದೆ. ಅಲ್ಲದೇ ವೀಳ್ಯದೆಲೆ ತೋಟಕ್ಕೆ, ಚಪ್ಪಲಿ ಹಾಕಿ ಹೋಗಬಾರದೆಂಬ ನಿಯಮವನ್ನೂ, ವೀಳ್ಯದೆಲೆ ತೋಟದಲ್ಲಿ ಮಾತನಾಡುವಾಗ ಎಚ್ಚರದಿಂದ ಮಾತನಾಡುವಂತೆಯೂ, ಮಾತಿಗೆ ತಪ್ಪಿದರೆ ಗಂಡಾಂತರ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತದೆ.
ದಶಾವತಾರಗಳು ಯಾವುವು ?
  1. ಮತ್ಸ್ಯಾವತಾರ
  2. ಕೂರ್ಮಾವತಾರ
  3. ವರಾಹಾವತಾರ
  4. ನರಸಿಂಹಾವತಾರ
  5. ವಾಮನಾವತಾರ
  6. ಪರಶುರಾಮಾವತಾರ
  7. ಶ್ರೀರಾಮವತಾರ
  8. ಶ್ರೀಕೃಷ್ಣಾವತಾರ
  9. ಬುದ್ದಾವತಾರ
  10. ಕಲ್ಕಿ ಅವತಾರ

ಗರ್ಭಿಣಿ ಸ್ತ್ರೀಯರು ರಾತ್ರಿಯ ವೇಳೆ ಹೊರ ಹೋಗಬಾರದೇ?
ರಾತ್ರಿ ಎಂಬುದು ಕತ್ತಲಿನಿಂದ ಕೂಡಿದ್ದು, ದುಷ್ಟಶಕ್ತಿಗಳ ಬಲ ಹೆಚ್ಚುವ ಕಾಲವಾಗಿರುತ್ತದೆ. ಈ ಸಂದರ್ಭದಲ್ಲಿ ಗರ್ಭಿಣಿ ಸ್ತ್ರೀ ಹೊರ ಹೋದಲ್ಲಿ ಕತ್ತಲಿನಲ್ಲಿ ಕೇಳಿ ಬರುವ ಅಸಹಜವಾದ ಶಬ್ದಗಳಿಂದ ಗರ್ಭಿಣಿಯರು ಹೆದರಿಕೊಂಡಲ್ಲಿ ಹುಟ್ಟಬಹುದಾದ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮವಾಗಿ ಹುಟ್ಟುವ ಮಗು ಮಾನಸಿಕವಾಗಿ ಅಸಹಜವಾಗಿ, ಪುಕ್ಕಲುತನದಿಂದ ಹುಟ್ಟುವ ಸಂಭವಿರುತ್ತದೆ.
ಹಣೆಯಲ್ಲಿ ಕುಂಕುಮ ಇಡಬೇಕೆನ್ನುವುದು ಏತಕ್ಕಾಗಿ?
ಹಣೆಯನ್ನು ಭ್ರೂಮಧ್ಯ ಸ್ಥಾನ ಎಂದು ಕರೆಯಲಾಗುತ್ತದೆ. ಅಲ್ಲದೇ ಹಣೆಯಲ್ಲಿನ ಕುಂಕುಮ ಇಡುವ ಭಾಗವನ್ನು ಲಲಾಟ ಎಂದೂ ಸಹ ಕರೆಯಲಾಗುತ್ತದೆ. ಲಲಾಟ ಎಂಬ ಸ್ಥಳವು ಪರ ಬ್ರಹ್ಮನ ಸ್ಥಾನವಾಗಿದೆ. ಬ್ರಹ್ಮನ ಬಣ್ಣ ಕೆಂಪು. ಅದುದರಿಂದ ಹಣೆಯಲ್ಲಿ ಆ ಭಾಗದ ದೇವರಾದ ಬ್ರಹ್ಮನ ಬಣ್ಣವಾದ ಕೆಂಪನ್ನು ಅಂದರೆ ಕುಂಕುಮವನ್ನು ಇಡಲಾಗುತ್ತದೆ.
ದೇಗುಲದಲ್ಲಿ ದರ್ಶನವಾದ ನಂತರ ಕುಳಿತುಕೊಳ್ಳಲೇಬೇಕೇ?
ಇದೊಂದು ಬೆಳೆದು ಬಂದಿರುವ ನಂಬಿಕೆಯಷ್ಟೇ ಆಗಿದೆ. ವಾಸ್ತವವಾಗಿ ದೇಗುಲಕ್ಕೆ ತೆರಳಿ, ಅಲ್ಲಿನ ದೈವದರ್ಶನ ಸಂಧರ್ಭ ಅಲ್ಲಿನ ವಾತಾವರಣದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ, ದೊರೆಯುತ್ತದೆ. ಜೀವನದ ಜಂಜಾಟಗಳಿಂದ ಮುಕ್ತರಾಗಿ ಶಾಂತಿ, ನೆಮ್ಮದಿಗಳಿಸಿಕೊಳ್ಳುವ ವಾತಾವರಣದಲ್ಲಿ ಕೆಲ ಹೊತ್ತು ಕುಳಿತುಕೊಂಡಲ್ಲಿ ಮನಸ್ಸು ಪ್ರಫುಲ್ಲ ವಾಗುತ್ತದೆ ಎಂಬುದು ನಿಜವಾದ ಉದ್ದೇಶವಾಗಿದೆ.
ಮಂಗಳವಾರದಂದು ಭೂಮಿಯನ್ನುಅಗೆಯವಾರದೇ?
ಭೂಮಿಯನ್ನು ಭೂಮಿತಾಯಿಎಂದು ಪೂಜಿಸುತ್ತಾರೆ. ಅಂದರೆ ಭೂಮಿಗೆ ಸ್ತ್ರೀ ಸ್ಥಾನವನ್ನೇ ನೀಡಲಾಗಿದೆ. ಹೀಗಿರುವಾಗ ಭೂಮಿತಾಯಿಯ ಪುತ್ರಕುಜ. ಹಾಗೂ ಪ್ರತಿಯೊಂದು ವಾರಕ್ಕೂ ಒಂದು ಗ್ರಹ ಅಧಿಪತಿಯಾಗಿದ್ದು, ಮಂಗಳವಾರಕ್ಕೆ ಕುಜನೇ ಅಧಿಪತಿಯಾಗಿದ್ದಾನೆ. ಹೀಗಿರುವಾಗ ಮಂಗಳವಾರದಂದು ತನ್ನ ತಾಯಿಯನ್ನೇ, ತಾಯಿಯ ಒಡಲನ್ನೇ ಅಗಿದರೆ ಕುಜನ ವಕ್ರದೃಷ್ಟಿಗೊಳಗಾಗಬೇಕಾಗುತ್ತದೆ. ಅಲ್ಲದೇ ಕುಜ ಅಗ್ನಿತತ್ವವಾಗಿದ್ದು, ಮಂಗಳವಾರದಂದು ಭೂಮಿಯಲ್ಲಿ ನೀರಿಗೆ ಸಂಬಂಧಿಸಿದ ಯಾವುದೇ ಕೆಲಸ ಮಾಡಿದರೂ ಕುಜನ ಅಗ್ನಿತತ್ವದ ಪರಿಣಾಮದಿಂದಾಗಿ ಯಶಸ್ಸು ದೊರೆಯುವುದು. ಅಸಾಧ್ಯ ಎಂದು ಹೇಳಲಾಗುತ್ತದೆ. 
‘ಪಕ್ಷಿರಾಜ’ ಗರುಡ, ವಿಷ್ಣು ದೇವನ ವಾಹನ ಆಗಿದ್ದು ಹೇಗೆ?
ಗರುಡ ಹಾಗು ಆತನ ತಾಯಿಯಾದ ವಿನತ, ಗರುಡನ ಮಲತಾಯಿಯಾದ ಕದ್ರು (ಸರ್ಪಗಳ ತಾಯಿ) ವಿನ ದಾಸ-ದಾಸಿಯರಾಗಿದ್ದರು. ತಾನು ಮತ್ತು ತನ್ನ ತಾಯಿಯನ್ನು, ಕದ್ರುವಿನ ಗುಲಾಮಗಿರಿಯಿಂದ ಮುಕ್ತಗೊಳ್ಳಲು – ಸ್ವತಃ ಗರುಡನು ಇಂದ್ರನ ದೇವಲೋಕಕ್ಕೆ ಹಾರಿ, ಅಮೃತವನ್ನು ತಂದು ಸರ್ಪಗಳಿಗೆ ನೀಡುವ ಪ್ರಸ್ತಾಪವನ್ನು ಮಾಡಿ ಕದ್ರುವಿನ ಅಪ್ಪಣೆ ಪಡೆದನು.ದೇವರುಗಳಿಗೆ ಇದರ ಸುಳಿವು ಸಿಕ್ಕಿತು, ಭೀಕರ ಯುದ್ಧವೂ ನಡೆಯಿತು, ಆದರೆ ಈ ಯುದ್ಧದಲ್ಲಿ ಗರುಡನು ಅವರನ್ನು ಸೋಲಿಸಿದನು. ನಂತರ, ತನ್ನ ಬುದ್ಧಿ ಮತ್ತು ಶಕ್ತಿ ಬಳಸಿ, ದೊಡ್ಡ ಗಂಡಾಂತರಗಳನ್ನು ದಾಟಿ, ಎಲ್ಲಾ ಕಾವಲುಗಳನ್ನು ಹಾರಿ, ಅಮೃತದ ಕಲಶವನ್ನು ಪಡೆದೇ ಬಿಟ್ಟ.ಗರುಡನು ಬಯಸಿದ್ದಲ್ಲಿ ಅಮೃತವನ್ನು ತಾನೇ ಕುಡಿಯಬಹುದಾಗಿತ್ತು, ಅಮರನಾಗ ಬಹುದಿತ್ತು. ಆದರೆ ತನ್ನ ತಾಯಿಯಾದ ವಿನತಳನ್ನು ಕದ್ರುವಿನಿಂದ ಬಿಡುಗಡೆ ಪಡಿಸಲು, ತಾನುಕೊಟ್ಟ ಮಾತನ್ನು ಉಳಿಸಿಕೊಳ್ಳಲು – ಹಾವುಗಳಿಗೇ ಅದನ್ನು ನೀಡಲು ಮುಂದಾದನು. ಈ ನಿಸ್ವಾರ್ಥ ಕಾರ್ಯವನ್ನು ಕಂಡ ವಿಷ್ಣು ಗರುಡನಿಗೆ ವರವನ್ನು ನೀಡಿದನು. ಆ ವರವೇನೆಂದರೆ, ಅಮೃತ ಕುಡಿಯದೆ, ಗರುಡನನ್ನು ಅಮರನನ್ನಾಗಿ ಮಾಡಿತು. ಇಲ್ಲದೆ ಅಮರ ಆಯಿತು ಒಂದು ಪ್ರಸಾದ ನೀಡಲಾಗುತ್ತದೆ ವಿಷ್ಣುವಿನ ಪ್ರಭಾವಿಸಿತು. ಆದರೆ ವಿಷ್ಣು, ಹಾವುಗಳು ಈ ಅಮೃತವನ್ನು ಕುಡಿಯುವುದನ್ನು ತಡೆಯಲು ಕೇಳಿಕೊಂಡನು. ಹಾವುಗಳೆಲ್ಲಾ ಗರುಡನು ಅಮೃತದೊಂದಿಗೆ ಆಗಮಿಸಿದ್ದನ್ನು ಕಂಡು, ಗರುಡನ ತಾಯಿಯನ್ನು ಬಿಡುಗಡೆ ಮಾಡಿದರು.ಅವರೆಲ್ಲಾ ಅಮೃತವನ್ನು ಸೇವಿಸಲು ಮುಂದಾದಗ, ಉಪಾಯದಿಂದ ಗರುಡ ಅಡ್ಡಿಮಾಡಿ, ಕುಡಿಯುವ ಮುನ್ನ, ಹಾವುಗಳು ಸ್ವಚ್ಛಗೊಳ್ಳುವುದು ಉತ್ತಮ ಎಂದು ಅವುಗಳಿಗೆ ನೆನಪು ಮಾಡಿದನು. ಹಾವುಗಳು ಇದಕ್ಕೆ ಒಪ್ಪಿಕೊಂಡು, ಸ್ವಚ್ಛಗೊಳ್ಳಲು ನೀರಿನ ಬಳಿ ಹೋದರು. ಅಷ್ಟರಲ್ಲಿ, ತಕ್ಷಣ ಇಂದ್ರನು ಕೆಳಗಿಳಿದು ಬಂದು, ಗರುಡನ ಮೇಲೆ ದಾಳಿ ನೆಡೆಸಿ, ಗರುಡನ ಮೇಲೆ ಸಿಡಿಲು ಎಸೆದು, ಇಂದ್ರನು ಅಮೃತ ಮರುಪಡೆದುಕೊಂಡು ಹೋದನು. ಸರ್ಪಗಳಿಗೆ ಅಮೃತ ಇಲ್ಲದಂತಾಯಿತು. ದನ್ನೆಲ್ಲಾ ದೂರದಿಂದ ನೋಡುತ್ತಿದ್ದ ವಿಷ್ಣು, ಗರುಡನ ಧೈರ್ಯ, ಸಾಹಸ ಮತ್ತು ಧೃತಿಯಿಂದ ಸಂತಸಗೊಂಡು, ಗರುಡನನ್ನು ಎಲ್ಲಾ ಪಕ್ಷಿಗಳ ರಾಜ ‘ಪಕ್ಷಿರಾಜ’ ಗರುಡ ಎಂದು ಘೋಷಿಸಿದನು. ಇದಕ್ಕೆ ಪ್ರತಿಯಾಗಿ ಗರುಡ, ವಿಷ್ಣು ದೇವನ ವಾಹನನಾಗಲು ಒಪ್ಪಿಕೊಂಡನು. (ಮಾಹಿತಿ ಕೃಪೆ : ವ್ಯಾಟ್ಸಪ್ ಸಂದೇಶ)
“ದೇವಸ್ಥಾನಗಳಿಗೆ ಹೆಚ್ಚೆಚ್ಚು ಹೋಗುವುದರಿಂದ ಆರೋಗ್ಯ ವರ್ಧಿಸುತ್ತದೆ”?
ನಿಜಕ್ಕೂ ಅಚ್ಚರಿಯಾಗಬಹುದು… ದೇವಸ್ಥಾನಗಳಿಗೆ ಹೋಗುವುದನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಿ.. ಇದರಿಂದ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.. ದೇವಸ್ಥಾನಗಳನ್ನು ಕಟ್ಟಿದ ಜಾಗಗಳಲ್ಲಿ ಅಯಸ್ಕಾಂತೀಯ ತರಂಗಗಳು (Magnetic Waves) ಸದಾ ಪ್ರವಹಿಸುತ್ತಲೇ ಇರುತ್ತವೆ… ಹೇಗೆ ಗೊತ್ತೇ…?? ದೇವರ ಮೂಲಸ್ಥಾನ ಗರ್ಭಗುಡಿ… ಆ ಗರ್ಭಗುಡಿಗೆ ಅಥವಾ ಮೇಲ್ಛಾವಣಿಗೆ ಹೊದೆಸಿರುವ ತಾಮ್ರದ ಹೊದಿಕೆಗಳನ್ನು ನೀವು ನೋಡಿರಬಹುದು… ಆ ತಾಮ್ರದ ಹೊದಿಕೆಗಳಲ್ಲೇ ಸದಾ ಸಕಾರಾತ್ಮಕ ಶಕ್ತಿ (Positive energy) ಪ್ರವಹಿಸುತ್ತಲೇ ಇರುತ್ತದೆ… ನಾವು ದೇವಸ್ಥಾನಕ್ಕೆ ಅಥವಾ ದೇವಸ್ಥಾನದ ಪ್ರದಕ್ಷಿಣೆ ಹಾಕುವಾಗ ಈ ಶಕ್ತಿ ನಮ್ಮ ಶರೀರದಲ್ಲೂ ಪ್ರವಹಿಸುತ್ತದೆ… ದೇವಸ್ಥಾನದಲ್ಲಿ ಜಾಸ್ತಿ ಹೊತ್ತು ಕುಳಿತು ಜಪ ಅಥವಾ ಧ್ಯಾನ ಮಾಡುವುದರಿಂದ ದೇಹದ ಆಯಾಸ ಕಡಿಮೆಯಾಗಿರುವುದು ನಿಮ್ಮ ಗಮನಕ್ಕೂ ಬಂದಿರಬಹುದು… ಅದಕ್ಕೆ ಕಾರಣ ಇದೇ Positive energy. ದೇವಸ್ಥಾನದಲ್ಲಿನ ಶಾಂತತೆಯಿಂದ ನಮ್ಮ ಮನಸ್ಸೂ ಪ್ರಶಾಂತವಾಗುತ್ತದೆ ಎಂಬುದಕ್ಕೆ ಯಾವುದೇ ಅನುಮಾನವಿಲ್ಲ. ಇನ್ನೂ ಇದೆ… ಪವಿತ್ರವಾದ ಗರ್ಭಗೃಹ ಮೂರೂ ಕಡೆಯಿಂದ ಮುಚ್ಚಲಾಗಿರುತ್ತದೆ… ಮುಖ್ಯದ್ವಾರವೊಂದೇ ತೆರೆದಿರುತ್ತದೆ… ಗರ್ಭಗುಡಿಯಲ್ಲಿ ಪ್ರವಹಿಸುವ ಅಯಸ್ಕಾಂತೀಯ ತರಂಗಗಳು (Magnetic Waves) ಮುಖ್ಯದ್ವಾರದ ಮೂಲಕ ಜೋರಾಗಿ ಚಿಮ್ಮುತ್ತದೆ… ಆದ್ದರಿಂದ ಮುಖ್ಯದ್ವಾರದ ಮುಂದೆ ನಿಂತಷ್ಟೂ ನಮಗೆ ಸಮಾಧಾನವಾಗುತ್ತದೆ… ಒಂದೆಡೆ ದೇವರ ದರ್ಶನ , ಇನ್ನೊಂದೆಡೆ ಆಯಾಸ ಪರಿಹಾರ… ಹೇಗಿದೆ ನೋಡಿ..!!
ಹಾಗೇ ದೀಪಗಳಿಂದ ಬೆಳಕಿನ ಶಕ್ತಿ (Light energy), ಘಂಟಾನಾದದಿಂದ ಹಾಗೂ ಮಂತ್ರಘೋಷಗಳಿಂದ ಶಬ್ದ ಶಕ್ತಿ (Sound Energy), ಹೂಗಳ ಪರಿಮಳದಿಂದ, ಕರ್ಪೂರದ ಸುವಾಸನೆಯಿಂದ ರಾಸಾಯನಿಕ ಶಕ್ತಿ (Chemical Energy), ಇವೆಲ್ಲಕ್ಕಿಂತಲೂ ಪ್ರಮುಖವಾದದ್ದು ದೇವರ ಪ್ರತಿಮೆಯಿಂದ ಹಾಗೂ ಗರ್ಭಗುಡಿಯಲ್ಲಿ ಇಟ್ಟಿರುವ ತಾಮ್ರದ ಹರಿವಾಣ, ತಾಮ್ರದ ಪೂಜಾಸಾಮಗ್ರಿಗಳಿಂದ ಬರುವ, ಉತ್ತರ ದಕ್ಷಿಣ ಧೃವಗಳಿಂದ (South north pole) ಪ್ರವಹಿಸುವ ಸಕಾರಾತ್ಮಕ ಶಕ್ತಿ..!! ಇನ್ನು ತೀರ್ಥಸೇವನೆ… ತೀರ್ಥವನ್ನು ಮಾಡುವುದು ಹೇಗೆ…??? ಯಾಲಕ್ಕಿ , ತುಳಸಿ , ಲವಂಗ ಮುಂತಾದವುಗಳಿಂದ… ಇವುಗಳನ್ನು ನೀರಿಗೆ ಹಾಕುವುದರಿಂದ ನೀರಿನಲ್ಲಿಯೂ ಸಕಾರಾತ್ಮಕ ಶಕ್ತಿಯ ಉದ್ಭವವಾಗುತ್ತದೆ… ತೀರ್ಥಸೇವನೆಯಿಂದ ದೇಹ ಆಹ್ಲಾದವಾಗುತ್ತದೆ… ಚೈತನ್ಯ ಮೂಡುತ್ತದೆ… ಆರೋಗ್ಯಕರವೂ ಹೌದು… ಹೇಗೆಂದರೆ, ಲವಂಗ ನಮ್ಮ ಹಲ್ಲುಗಳ ಆರೋಗ್ಯವನ್ನು ವರ್ಧಿಸುತ್ತದೆ, ತುಳಸಿ ನೆಗಡಿ, ಕೆಮ್ಮು, ಬರದಂತೇ ತಡೆಯುತ್ತದೆ, ಯಾಲಕ್ಕಿ ಅಥವಾ ಪಂಚಕರ್ಪೂರ ಬಾಯಿಯನ್ನು ಶುದ್ಧವಾಗಿಸುತ್ತದೆ… ಇನ್ನೂ ಅನೇಕ ಔಷದೀಯ ಗುಣಗಳು ತೀರ್ಥದಲ್ಲಿರುತ್ತವೆ… ದೀಪಾರಾಧನೆ, ವಿಶೇಷಪೂಜೆಗಳ ದಿನಗಳಲ್ಲಿ ದೇವಾಲಯಗಳಲ್ಲಿ ಹೆಚ್ಚು – ಹೆಚ್ಚು ಸಕಾರಾತ್ಮಕಶಕ್ತಿಯ ಸಂಚಾರವಾಗುತ್ತಿರುತ್ತದೆ… ಇನ್ನು ದೇವಸ್ಥಾನಗಳಲ್ಲಿ ಶುದ್ಧಿಗಾಗಿ ನೀರನ್ನು ದೇಹದ ಮೇಲೆ ಚಿಮುಕಿಸುತ್ತಿರುವುದನ್ನು ನೋಡಿರಬಹುದು… ಇದರಿಂದ ನಮ್ಮ ಶರೀರದ ಶುದ್ಧಿ ಹಾಗೂ ಆಯಾಸದ ನಿವಾರಣೆಯಾಗುತ್ತದೆ… ಆ ಕಾರಣದಿಂದಲೇ ಪುರುಷರು ದೇವಸ್ಥಾನಕ್ಕೆ ಹೋಗುವಾಗ ಅಂಗಿಯನ್ನು ಕಳಚಿಟ್ಟು ಹೋಗುವುದು ಒಳ್ಳೆಯದು… ಮಹಿಳೆಯರು ಜಾಸ್ತಿ ಒಡವೆಗಳನ್ನು ಹಾಕಿಕೊಂಡು ಹೋಗುವುದು ಒಳ್ಳೆಯದು… ಏಕೆಂದರೆ ಲೋಹಗಳಿಂದ ಶಕ್ತಿಯ ಸಂಚಾರ ದೇಹದಲ್ಲಾಗುತ್ತದೆ.. ಸಾಕಲ್ಲವೇ ಇಷ್ಟು ವೈಜ್ಞಾನಿಕ ಆಧಾರ…?? ಆದ್ದರಿಂದ ಸ್ನೇಹಿತರೇ ದೇವಸ್ಥಾನಗಳಿಗೆ ಹೆಚ್ಚೆಚ್ಚು ಭೇಟಿ ನೀಡಿ.. ( ಮಾಹಿತಿ ಕೃಪೆ : ಶ್ರೀ ಗಂಗಾಧರ್, ಪಳವಳ್ಳಿ)
ರುದ್ರಾಕ್ಷಿಗಳನ್ನು ಧರಿಸಬೇಕಾದ ಮೂಲ ಮಂತ್ರ ಯಾವುದು?
ರುದ್ರಾಕ್ಷಿಯನ್ನು ಧರಿಸುವಾಗ ಈ ಕೆಳಗಿನ ಮೂಲ ಮಂತ್ರವನ್ನು ಉಚ್ಚರಿಸಬೇಕಿರುತ್ತದೆ
ಓಂ ಹ್ರೀಂ ನಮ: ಓಂ ನಮ:
ಕ್ಲೀಂ ನಮ: ಓಂ ಹ್ರೀಂ ನಮ:
ಓಂ ಹ್ರೀಂ ನಮ: ಓಂ ಹ್ರೀಂ ಶ್ರುಂ ನಮ:
ಓಂ ಹ್ರೂಂ ನಮ: ಓಂ ಹ್ರುಂ ನಮ:
ಓಂ ಹ್ರೀಂ ಶ್ರುಂ ನಮ: ಓಂ ಹ್ರಿಂ ನಮ:
ಓಂ ಹ್ರೀಂ ಶ್ರಂ ನಮ: ಓಂ ಕ್ರೊಂ ಕ್ಷೊಂ ರೌ ನಮ:
ಓಂ ಹ್ರೀಂ ನಮ: ಓಂ ನಮ: ಸಂಪೂರ್ಣ ವಿವರಗಳಿಗೆ ಓದಿ ಮೂಲ- ಶಿವಮಹಾಪುರಾಣ (ಲೇಖಕರು ಶ್ರೀಯುತ ಮಾಗಡಿ ನರಸಿಂಹಯ್ಯ)
ದೇಹದ ಯಾವ ಭಾಗಗಳಲ್ಲಿ ಎಷ್ಟು ರುದ್ರಾಕ್ಷಿಗಳನ್ನು ಧರಿಸಿದರೆ ಫಲ?
      ರುದ್ರಾಕ್ಷಿಯನ್ನು ದೇಹದ ಬೇರೆ ಬೇರೆ ಭಾಗಗಳಲ್ಲಿ ಧರಿಸಿರುವುದನ್ನು ನೀವು ನೋಡಿರಬಹುದು. ಆದರೆ ಯಾವ ಯಾವ ಭಾಗಗಳಲ್ಲಿ ಎಷ್ಟು ರುದ್ರಾಕ್ಷಿ ಧರಿಸಿದರೆ ಅದರ ಪೂರ್ಣ ಫಲ ಪ್ರಾಪ್ತಿಯಾಗುತ್ತದೆ ಎಂಬುದಕ್ಕೆ ನಿಯಮಗಳಿದ್ದು ಅದನ್ನು ಈ ಕೆಳಗಿನಂತೆ ಕಾಣಬಹುದು.
ಕಿವಿಯಲ್ಲಿ ಆರು ರುದ್ರಾಕ್ಷಿ, ಚಂಡಿಕೆಯಲ್ಲಿ ಮೂರು ರುದ್ರಾಕ್ಷಿ, ಸೊಂಟದ ಭಾಗದಲ್ಲಿ ಐದು ರುದ್ರಾಕ್ಷಿ, ಕಂಠದಲ್ಲಿ ನೂರ ಎಂಟು ರುದ್ರಾಕ್ಷಿ, ಭುಜದಲ್ಲಿ ಧರಿಸುವುದಾದರೆ ಹನ್ನೊಂದು ರುದ್ರಾಕ್ಷಿ, ಜನಿವಾರದಲ್ಲಿ ಮೂರು ರುದ್ರಾಕ್ಷಿಗಳನ್ನು ಧರಿಸಿದರೆ ಅದನ್ನು ಧರಿಸಿದ ಸಂಪೂರ್ಣ ಫಲವು ಪ್ರಾಪ್ತಿಯಾಗುತ್ತದೆ. ಸಂಪೂರ್ಣ ವಿವರಗಳಿಗೆ ಓದಿ ಮೂಲ – ಶಿವಮಹಾಪುರಾಣ (ಲೇಖಕರು ಶ್ರೀಯುತ ಮಾಗಡಿ ನರಸಿಂಹಯ್ಯ)
ರುದ್ರಾಕ್ಷಿಯ ವಿವಿಧ ಮುಖಗಳು ಹಾಗೂ ಅದರಿಂದ ದೊರೆಯಬಹುದಾದ ಫಲಗಳೇನು?
ರುದ್ರಾಕ್ಷಿಗೆ ಇರುವ ಮುಖಗಳ ಆಧಾರದಲ್ಲಿ ಅದನ್ನು ಧರಿಸುವ ವ್ಯಕ್ತಿ ಪಡೆಯಬಹುದಾದ ಫಲವನ್ನು ನಿರ್ಧರಿಸಲಾಗುತ್ತದೆ ರುದ್ರಾಕ್ಷಿಯ ವಿವಿಧ ಮುಖಗಳ ಫಲಾಫಲಗಳನ್ನು ಈ ಕೆಳಗಿನಂತೆ ನೋಡಬಹುದು.
ಒಂದು ಮುಖವಿದ್ದರೆ – ಮುಕ್ತಿ ದೊರೆಯುವುದು
ಎರಡು ಮುಖವಿದ್ದರೆ – ಪಾಪಗಳಿಂದ ವಿಮುಕ್ತಿ ದೊರೆಯುತ್ತದೆ
ಮೂರು ಮುಖವಿದ್ದರೆ – ಸಾಧನ ತ್ರಯವೂ
ನಾಲ್ಕು ಮುಖವಿದ್ದರೆ – ಅದು ಸಾಕ್ಷಾತ್ ಪರಬ್ರಹ್ಮನ ಸ್ವರೂಪವೂ ಆಗಿರುತ್ತದೆ.
ದಪ್ಪನೆಯ ರುದ್ರಾಕ್ಷಿ ಧಾರಣೆಯಿಂದ ಸೌಭಾಗ್ಯವೂ, ನೆಲ್ಲಿಕಾಯಿ ಗಾತ್ರದ ರುದ್ರಾಕ್ಷಿಯಿಂದ ಸರ್ವಾರಿಷ್ಟ ನಿವಾರಣೆಯೂ, ಗುಲಗಂಜಿ ಗಾತ್ರದ ರುದ್ರಾಕ್ಷಿಯಿಂದ ಇಷ್ಟಾರ್ಥ ಸಿದ್ಧಿಯೂ, ರಂದ್ರವುಳ್ಳ ರುದ್ರಾಕ್ಷಿಯಿಂದ ಉತ್ತಮ ಗುಣಗಳೂ ಮನುಷ್ಯನಿಗೆ ಪ್ರಾಪ್ತಿಯಾಗುತ್ತದೆ. ಸಂಪೂರ್ಣ ವಿವರಗಳಿಗೆ ಓದಿ ಮೂಲ- ಶಿವಮಹಾಪುರಾಣ (ಲೇಖಕರು ಶ್ರೀಯುತ ಮಾಗಡಿ ನರಸಿಂಹಯ್ಯ)
ಸಾಮಾನ್ಯವಾಗಿ ಯಾವುದೇ ದೇವರ ಮಂತ್ರವನ್ನು ಉಚ್ಚರಿಸುವ ಮುನ್ನ ಓಂ ಎಂದು ಉಚ್ಚರಿಸಲಾಗುತ್ತದೆ ಏಕೆ?
ಓಂ ಎಂಬುದನ್ನು ಪ್ರಣವಾಕ್ಷರ ಎಂದು ಕರೆಯಲಾಗುತ್ತದೆ. ಅ ಕಾರ, ಉ ಕಾರ ಮತ್ತು ಮ ಕಾರಗಳ ಸಂಗಮವೇ ಓಂ ಆಗಿದೆ.
ಅ ಕಾರ ಎಂದರೆ – ಅರಿಷಡ್ವರ್ಗಗಳ ಭ್ರಮೆಯನ್ನು ಬಿಡಿಸಿ
ಉ ಕಾರ ಎಂದರೆ – ಉಪಾದಿಗಳನ್ನು ದೂರಗೊಳಿಸಿ
ಮ ಕಾರ ಎಂದರೆ – ಮಾಯ ಮೋಹಾದಿಗಳನ್ನು ದೂರಗೊಳಿಸಿ  ದೈವಸನ್ನಿಧಿ ಅಥವಾ ಶಿವಪದವನ್ನು ದೊರಕಿಸಿಕೊಡುವುದೇ ಈ ಪ್ರಣವಾಕ್ಷರ ಮಂತ್ರ ಓಂ. ಒಂದು ಕೋಟಿ ಪ್ರಣವ ಮಂತ್ರವನ್ನು ನಿರಂತರವಾಗಿ ಜಪಿಸುವವರು ಈಶತ್ವವನ್ನು ಗಳಿಸುತ್ತಾರೆ. ಓಂ ಪ್ರಣವಾಕ್ಷರವಾದರೆ ನಮ: ಶಿವಾಯ ಪಂಚಾಕ್ಷರಿ ಮಂತ್ರ (ಶಿವನಿಗೆ ಅತ್ಯಂತ ಪ್ರಿಯವಾದ ಮಂತ್ರ) ಈ ಎರೆಡೂ ಸೇರಿ ಪ್ರಣವ ಪಂಚಾಕ್ಷರಿ ಮಂತ್ರವಾಗಿದೆ. ಸಂಪೂರ್ಣ ವಿವರಗಳಿಗೆ ಓದಿ ಮೂಲ- ಶಿವಮಹಾಪುರಾಣ (ಲೇಖಕರು ಶ್ರೀಯುತ ಮಾಗಡಿ ನರಸಿಂಹಯ್ಯ)
ರುದ್ರಾಕ್ಷಿಯು ಉಗಮವಾದದ್ದು ಮತ್ತು ಪೂಜಾರ್ಹವಾದದ್ದು ಹೇಗೆ?
 ಪರಶಿವನು ಒಮ್ಮೆ ಪಾರ್ವತಿಯೊಂದಿಗೆ ತನ್ನ ಹಿಂದಿನ ವೃತ್ತಾಂತವನ್ನು ತಿಳಿಸುತ್ತಾ ರುದ್ರಾಕ್ಷಿ ವೃಕ್ಷದ ಕುರಿತು ತಿಳಿಸಿದನು. ಶಿವನು ಒಮ್ಮೆ ನಿರಂತರವಾಗಿ ತಪಸ್ಸನ್ನಾಚರಿಸಿದರೂ ಸಹ ತಪೋಸಿದ್ಧಿಗಳಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಭಕ್ತರ ಭಕ್ತಿಗೆ ತಕ್ಷಣವೇ ಒಲಿದು ಬರುವ ಪರಶಿವನ ಗಮನವೆಲ್ಲವೂ ಭಕ್ತರ ಕಡೆಗೆ ಹೆಚ್ಚಾಗಿದ್ದ ಕಾರಣ ಶಿವನ ತಪಸ್ಸು ಫಲಿಸಲಿಲ್ಲ.  ಇದರಿಂದ ಶಿವನ ಕಣ್ಣಿನಿಂದ ಜಲಬಿಂದುಗಳು ಉದುರಲಾರಂಭಿಸಿದವು. ಈ ಬಿಂದುಗಳೇ ರುದ್ರಾಕ್ಷಿ ವೃಕ್ಷಗಳಾದವು. ಶಿವನು ಈ ರುದ್ರಾಕ್ಷಿಗಳನ್ನು ನಾಲ್ಕು ವರ್ಣದವರಿಗೂ ಸಮಾನವಾಗಿ ಹಂಚಿದನು. ಇದರಿಂದ ಯಾವುದೇ ವರ್ಣಬೇಧಗಳಿಲ್ಲದೇ ರುದ್ರಾಕ್ಷಿಯನ್ನು ಬಳಸಬಹುದಾಗಿದೆ. ರುದ್ರಾಕ್ಷಿಗಳು ಶಿವನಿಗೆ ಅತ್ಯಂತ ಪ್ರಿಯವಾದವುಗಳಾದುದರಿಂದ ಯಾರು ರುದ್ರಾಕ್ಷಿಯನ್ನು ಭಕ್ತಿ ಶ್ರದ್ಧೆಗಳಿಂದ ಧರಿಸುತ್ತಾರೋ ಅವರು ಶಿವನ ಅನುಗ್ರಹವನ್ನು ಪಡೆಯುತ್ತಾರೆ. ಸಂಪೂರ್ಣ ವಿವರಗಳಿಗೆ ಓದಿ ಮೂಲ- ಶಿವಮಹಾಪುರಾಣ (ಲೇಖಕರು ಶ್ರೀಯುತ ಮಾಗಡಿ ನರಸಿಂಹಯ್ಯ)
ಬಾಳೆ ಎಲೆಯು ಊಟಕ್ಕೆ ಶ್ರೇಷ್ಟವಾದುದು ಏಕೆ?
ಬಾಳೆಎಲೆಯ ಮೇಲ್ಪದರದ ರಚನೆಯಲ್ಲಿ epigallocatechin gallate  ಎಂಬ ಪಾಲಿ ಫಿನಾಲ್ ಅಂಶವಿರುತ್ತದೆ. ಬಿಸಿ ಆಹಾರದ ಎಲೆಗೆ ಬಿದ್ದ ತಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತದೆ. ಇದರಿಂದ ಜೀರ್ಣಕ್ರಿಯೆಚನ್ನಗಿರುತ್ತದೆ. ಬಾಳೆಎಲೆಯ ಮೇಲೆ ಬ್ಯಾಕ್ಟೀರಯಾಗಳು ಬಾಳುವುದಿಲ್ಲ. ಇದರಲ್ಲಿ ಏನೇ ಆಹಾರ ಬಡಿಸಿದರೂ ಹೊಟ್ಟೆಗೆ ಹೋಗುವ ಮುನ್ನವೇ ಕೊಲ್ಲಲ್ಪಡುತ್ತದೆ. ಅದರಲ್ಲೂ ಕ್ಯಾನ್ಸ್ರ್ ರೋಗಕ್ಕೆ ಕಾರಣವಾಗುವ ಫ್ರೀರ್ಯಾಡಿಕಲ್ ಎಂಬ ಜೈವಿಕ ರಾಸಾಯನಿಕಗಳನ್ನು ಇದು ದೇಹ ಸೇರಲು ಬಿಡುವುದೇ ಇಲ್ಲ. ಚೆನ್ನೈನ ಆಯುರ್ವೇದ ತಜ್ಷರ ಪ್ರಕಾರ ಸಣ್ಣ ವಯಸ್ಸಿನಲ್ಲೇ ಬಿಳಿಕೂದಲಿನ ಸಮಸ್ಯೆ ಇದ್ದವರು ನಿತ್ಯ ಬಾಳೆ ಎಲೆಯಲ್ಲಿ ಊಟಮಾಡಿದರೆ ಒಳ್ಳೆಯ ಫಲಿತಂಶ ಸಿಗುತ್ತದೆ. ತಟ್ಟೆಗಳಲ್ಲಿ ಊಟಮಾಡಿದರೆ ಅವುಗಳಲ್ಲಿ ಮಾರ್ಜಕದ ಕಣಗಳು ಹೊಟ್ಟೆಸೇರುತ್ತವೆ. ಆದರೆ ಬಾಳೆಎಲೆಯಲ್ಲಿ ಊಟಮಾಡಿದರೆ ಆ ಯಾವ ಸಮಸ್ಯೆಗಳು ಬರುವುದಿಲ್ಲ. ಬಾಳೆ ಎಲೆ ಊಟ ಆರೋಗ್ಯಕ್ಕೆ ತಂಪು. ಗ್ಯಾಸ್ ಅಡುಗೆಯಿಂದ ಆಹಾರದಲ್ಲಿ ಸೇರಿಕೊಳ್ಳುವ ಉಷ್ಣವೂ ಇಲ್ಲಿ ತಣ್ಣಗಾಗುತ್ತದೆ. (ಮೂಲ ವಿವಿಧ ವೆಬ್ ಪುಟಗಳಿಂದ)
ಈಶ್ವರನ ಜ್ಯೋತಿರ್ಲಿಂಗಗಳ ಕುರಿತು ತಿಳಿಸಿ?
ಮಾತೆ ಆದಿಶಕ್ತಿಗೆ ಕುರಿತಂತೆ ೫೨ ಶಕ್ತಿಪೀಠಗಳಿರುವುದನ್ನು ನಾವೆಲ್ಲರೂ ಕೇಳಿದ್ದೇವೆ. ಅದೇ ರೀತಿಯಲ್ಲಿ ಮಹಾದೇವ ಈಶ್ವರನ ಕುರಿತು ತಿಳಿಯುವ ಸಂದರ್ಭದಲ್ಲಿ ಜ್ಯೋತಿರ್ಲಿಂಗಗಳ ಕುರಿತು ಪ್ರಸ್ತಾಪ ಬರುತ್ತದೆ. ಈಶ್ವರನಿಗೆ ಸಂಬಂಧಿಸಿದಂತೆ ಒಟ್ಟು 12 ಜ್ಯೋತಿರ್ಲಿಂಗಗಳನ್ನು ಕಾಣಬಹುದು. ಅವುಗಳನ್ನು ಈ ಕೆಳಗಿನಂತೆ ಕಾಣಬಹುದಾಗಿದೆ.
ಸೋಮನಾಥ ದೇವಾಲಯ – ಗುಜರಾತ್ ರಾಜ್ಯದ ಜುನಾಘಡ್ ಜಿಲ್ಲೆಯಲ್ಲಿರುವ ವೆರಾವಲ್ ಎಂಬಲ್ಲಿ ಈ ದೇವಾಲಯವನ್ನು ಕಾಣಬಹುದಾಗಿದೆ. ಈ ದೇವಾಲಯವನ್ನು ಸೋಮ (ಚಂದ್ರ)ನು ನಿರ್ಮಾಣ ಮಾಡಿದ ಕಾರಣದಿಂದ ಈ ದೇವಾಲಯಕ್ಕೆ ಸೋಮನಾಥ  ದೇವಾಲಯ ಎಂಬ ಹೆಸರು ಬಂತೆಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ಶ್ರೀ ಶೈಲ ಮಲ್ಲಿಕಾರ್ಜುನ ದೇವಾಲಯ – ಈ ದೇವಾಲಯವನ್ನು ಆಂದ್ರಪ್ರದೇಶ ರಾಜ್ಯದ ಕರ್ನೂಲು ಜಿಲ್ಲೆಯಲ್ಲಿ ಕಾಣಬಹುದಾಗಿದ್ದು, ಶ್ರೀಪರ್ವತ ಎಂಬಾತನು ಕಾರುಣ್ಯರೂಪಿಯಾದ ಶಿವನನ್ನು ಕುರಿತು ತಪಸ್ಸನ್ನಾಚರಿಸಿ ಈ ಸ್ಥಳದಲ್ಲಿಯೇ ನೆಲೆಸಬೇಕೆಂದು ಸಲ್ಲಿಸಿದ ಕೋರಿಕೆಯಿಂದ ಶಿವನು ಅಲ್ಲಿ ನೆಲೆಸಿದನು. ಹಾಗಾಗಿ ಈ ದೇವಾಲಯವನ್ನು ಹೊಂದಿರುವ ಪರ್ವತವನ್ನು ಶ್ರೀಶೈಲ ಎಂದು ಕರೆಯುತ್ತಾರೆ.
ಉಜ್ಜೈನಿಯ ಮಹಾಕಾಲೇಶ್ವರ ದೇವಾಲಯ – ಮದ್ಯಪ್ರದೇಶ ರಾಜ್ಯದ ಉಜ್ಜೈನಿ ಎಂಬ ನಗರದಲ್ಲಿ ಈ ದೇವಾಲಯವನ್ನು ಕಾಣಬಹುದು. ಶ್ರೀಕರ ಎಂಬ ಬಾಲಕನ ಕಲ್ಮಶರಹಿತ ಭಕ್ತಿ, ಪ್ರೀತಿಗೆ ಮೆಚ್ಚಿ ಶಿವನು ಈ ಸ್ಥಳದಲ್ಲಿಯೇ ಜ್ಯೋತಿರ್ಲಿಂಗದ ರೂಪದಲ್ಲಿ ನೆಲೆನಿಂತನೆಂಬುದು ಪ್ರತೀತಿ. ಈ ದೇವಾಲಯದಲ್ಲಿನ ಶಿವನನ್ನು ದಕ್ಷಿಣಾಮೂರ್ತಿ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಏಕೆಂದರೆ ಈ ದೇವಾಲಯದಲ್ಲಿ ಶಿವನು ದಕ್ಷಿಣಾಭಿಮುಖವಾಗಿರುವುದು. ಈ ದೇವಾಲಯವನ್ನು ಮುಕ್ತಿಧಾಮಗಳಲ್ಲೊಂದು ಎಂದು ಪರಿಗಣಿಸಲಾಗಿದೆ.
ಓಂಕಾರೇಶ್ವರ ದೇವಾಲಯ – ಮದ್ಯಪ್ರದೇಶ ರಾಜ್ಯದ ನರ್ಮದಾ ನದಿಯ ದಂಡೆಯ ಮೇಲೆ ಈ ದೇವಾಲಯವನ್ನು ಕಾಣಬಹುದು. ಈ ದೇವಾಲಯದ ಸುತ್ತಲೂ ನರ್ಮದಾ ನದಿ ಆವರಿಸಿಕೊಂಡಿದ್ದು, ಈ ಸ್ಥಳವನ್ನು ಪಾಕ್ಷಿಕ ರೂಪದಲ್ಲಿ ನೋಡಿದಾಗ ಓಂ ಎಂಬ ಆಕಾರ ಕಂಡುಬರುವುದರಿಂದ ಈ ದೇವಾಲಯವನ್ನು ಓಂಕಾರೇಶ್ವರ ದೇವಾಲಯ ಎಂದು ಕರೆಯಲಾಗುತ್ತದೆ. ಈ ದೇವಾಲಯವು ಅಹಲ್ಯಾಬಾಯಿ ಎಂಬ ಮಹಾರಾಣಿ (ಇಂಧೋರ್ ಆಸ್ಥಾನದ) ನಿರ್ಮಾಣ ಮಾಡಿರುವಳೆಂಬ ಪ್ರತೀತಿಯಿದೆ.
ಕೇದಾರನಾಥ ದೇವಾಲಯ – ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಎಂಬ ಜಿಲ್ಲೆಯಲ್ಲಿ (ರುದ್ರಪ್ರಯಾಗ ಎಂಬ ಸ್ಥಳವು ಈ ಹಿಂದೆ ಅತ್ಯಂತ ಕ್ರೂರ ನರಭಕ್ಷಕನಾಗಿ ಪರಿವರ್ತನೆಗೊಂಡು ಅಸಂಖ್ಯಾತ ಜನರನ್ನು ಹತ್ಯೆಮಾಡಿ, ಬೇಟೆಗಾರರಿಗೂ ಚಳ್ಳೆಹಣ್ಣು ತಿನ್ನಿಸಿ ಮೆರೆದ ಚಿರತೆಯ ಕಾರಣದಿಂದ ಕುಖ್ಯಾತಿ ಗಳಿಸಿದ ಸ್ಥಳವಾಗಿದೆ. ಈ ಕುರಿತು ಕನ್ನಡದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರಿಂದ ಅನುವಾದಿತವಾದ ಮೈ ನವಿರೇಳಿಸುವ ರುದ್ರಪ್ರಯಾಗದ ಭಯಾನಕ ನರಭಕ್ಶಕ ಕೃತಿಯನ್ನು ಓದಿ) ಕಾಣಬಹುದಾಗಿದೆ.ಏಪ್ರಿಲ್-ಅಕ್ಟೋಬರ್ ನಡುವಿನ ಆರು ತಿಂಗಳು ಮಾತ್ರವೇ ಈ ದೇವಾಲಯವನ್ನು ದರ್ಶಿಸುವ ಅವಕಾಶವಿದ್ದು, ನಂತರದ ಆರು ತಿಂಗಳುಗಳೂ ಈ ದೇವಾಲಯವು ಮಂಜಿನಿಂದ ಆವೃತವಾಗಿರುತ್ತದೆ. ಕೇದಾರ ಎಂಬ ಅರಸನಿಂದ ನಿರ್ಮಾಣಗೊಂಡ ಕಾರಣದಿಂದ ಈ ದೇವಾಲಯಕ್ಕೆ ಕೇದಾರನಾಥ ದೇವಾಲಯ ಎಂಬ ಹೆಸರು ಬಂದಿದೆ. ಕುರುಕ್ಶೇತ್ರ ಯುದ್ದದಲ್ಲಿ ತಮ್ಮವರನ್ನೇ ಹತ್ಯೆ ಮಾಡಿ ನೊಂದಿದ್ದ ಪಾಂಡವರು ಈ ಸ್ಥಳಕ್ಕೆ ಆಗಮಿಸಿ ಶಿವನ ದರ್ಶನ ಪಡೆದು, ಇಲ್ಲಿಯೇ ನೆಲೆನಿಲ್ಲುವಂತೆ ಕೇಳಿದ ಬೇಡಿಕೆಯನ್ನು ಮನ್ನಿಸಿ ಶಿವನು ಇಲ್ಲಿಯೇ ಜ್ಯೋತಿರ್ಲಿಂಗವಾಗಿನೆಲೆನಿಂತನೆಂದು ಪುರಾಣದಲ್ಲಿ ಹೇಳಲಾಗಿದೆ.
ಭೀಮಾಶಂಕರ ದೇವಾಲಯ – ಮಹಾರಾಷ್ಟ ರಾಜ್ಯದಲ್ಲಿನ ಖೇಡ್ ಎಂಬ ಜಿಲ್ಲೆಯ ಭೋರಗಿರಿ ಎಂಬ ಹಳ್ಳಿಯಲ್ಲಿ ಈ ದೇವಾಲಯವನ್ನು ಕಾಣಬಹುದು. ಈ ದೇವಾಲಯವು ಸಹ್ಯಾದ್ರಿ ಬೆಟ್ಟಗಳ ತಪ್ಪಲಲ್ಲಿದ್ದು ಅದ್ಭುತ ಸೌಂದರ್ಯವನ್ನು ಹೊಂದಿದೆ. ಕರ್ಕತಿ ಎಂಬ ರಾಕ್ಷಸಿಯ ಮಗನಾದ ಭೀಮ ಎಂಬುವವನು ಕುಂಭಕರ್ಣನ ಮಗನಾಗಿದ್ದು, ಈತನ ಹತ್ಯೆಯು ಶ್ರೀರಾಮನಿಂದಾಯಿತೆಂದು ತಿಳಿದು ಕುಪಿತಗೊಂಡು ಮುನಿವರೇಣ್ಯರಿಗೆ ತೊಂದರೆ ಕೊಡುವುದಲ್ಲದೇ ಶಿವಭಕ್ತನಾದ ಕಾಮರೂಪನು ಶಿವಧ್ಯನದಲ್ಲಿರುವ ಸಂದರ್ಭದಲ್ಲಿ ಶಿವಲಿಂಗವನ್ನು ಧ್ವಂಸಗೊಳಿಸಲು ಹೋದ ಸಂದರ್ಭದಲ್ಲಿ  ಶಿವನೇ ಪ್ರತ್ಯಕ್ಷನಾಗಿ ಭೀಮನನ್ನು ಭಸ್ಮಗೊಳಿಸಿದ್ದಲ್ಲದೇ ಕಾಮರೂಪನ ಬೇಡಿಕೆಯಂತೆ ಅಲ್ಲಿಯೇ ಜ್ಯೋತಿರ್ಲಿಂಗದ ರೂಪದಲ್ಲಿ ನೆಲೆಸಿದನೆಂದು ಹೇಳಲಾಗಿದೆ.
ತ್ರ್ಯಯಂಬಕೇಶ್ವರ ದೇವಾಲಯ – ಮಹಾರಾಷ್ಟ ರಾಜ್ಯದ ನಾಸಿಕ್ ಜಿಲ್ಲೆಯಲ್ಲಿನ ತ್ರ್ಯಂಬಕ್ ಎಂಬ ಸ್ಥಳದಲ್ಲಿ ಹರಿಯುತ್ತಿರುವ ಗೋದಾವರಿ ನದಿಯ ದಡದಲ್ಲಿ ಈ ದೇವಾಲಯವನ್ನು ಕಾಣಬಹುದು.
ವಿಶ್ವೇಶ್ವರ ದೇವಾಲಯ – ಉತ್ತರಪ್ರದೇಶ ರಾಜ್ಯದ ಕಾಶಿ ಅಥವಾ ವಾರಣಾಸಿ ಎಂಬಲ್ಲಿ ಈ ದೇವಾಲಯವನ್ನು ಕಾಣಬಹುದಾಗಿದೆ.ಕ್ರಿ.ಶ 490 ರಲ್ಲಿ ಈ ದೇವಾಲಯದ ನಿರ್ಮಾಣವಾಗಿದೆಯೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗೈದೆ. ಓಂಕಾರೇಶ್ವರ ದೇವಾಲಯವನ್ನು ನಿರ್ಮಾಣ ಮಾಡಿದ ಇಂಧೋರ್ನ ರಾಣಿ ಅಹಲ್ಯಾಬಾಯಿಯೇ ಮುಸ್ಲಿಂ ದೊರೆಗ್ಳಿಂದ ಹಾನಿಗೀಡಾಗಿದ್ದ ಈ ದೇವಾಲಯವನ್ನು ಪುನರ್ನಿರ್ಮಾಣ ಮಾಡಿದಳೆಂದು ಪ್ರತೀತಿಯಿದೆ.
ವೈದ್ಯನಾಥೇಶ್ವರ ದೇವಾಲಯ – ಜಾರ್ಖಂಡ್ ರಾಜ್ಯದ ದೇವಘಡ ಬಳಿಯಲ್ಲಿ ಈದೇವಾಲಯವನ್ನು ಕಾಣಬಹುದು. ರಾವಣನು ಪಡೆದ ಆತ್ಮಲಿಂಗವನ್ನು ಗಣಪತಿಯು ಬುದ್ದಿವಂತಿಕೆಯಿಂದ ಭೂ ಸ್ಥಾಪನೆಗೈದಾಗ, ಕುಪಿತಗೊಂಡ ರಾವಣನು ಶಿವನಿಗಾಗಿ ಎಷ್ಟೇ ತಪಸ್ಸನ್ನಾಚರಿಸಿದರೂ ಪ್ರತ್ಯಕ್ಷನಾಗದಿದ್ದಾಗ ಬೇಸರಗೊಂಡ ರಾವಣನು ತನ್ನ ಒಂದೊಂದೇ ತಲೆಗಳನ್ನು ಕಡಿದು ಅರ್ಪಿಸತೊಡಗಿದನು, ಇದರಿಂದ  ಶಿವನು ಪ್ರತ್ಯಕ್ಷನಾಗಿ ಕಡಿಯಲಾಗಿದ್ದ ತಲೆಗಳನ್ನು ಮರುಜೋಡಿಸಿ ಹರಸಿದ ಕಾರಣದಿಂದ ಈ ದೇವಾಲಯಕ್ಕೆ ವೈದ್ಯನಾಥೇಶ್ವರ ದೇವಾಲಯವೆಂಬ ಹೆಸರು ಬಂತೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ನಾಗೇಶ್ವರ ಅಥವಾ ನಾಗನಾಥ ದೇವಾಲಯ – ಗುಜರಾತ್ ರಾಜ್ಯದ ದ್ವಾರಕ ನಗರದಲ್ಲಿ ಈ ದೇವಾಲಯವನ್ನು ಕಾಣಬಹುದಾಗಿದೆ. ಈ ಸ್ಥಳವು ನಾಗಾಸಾಧುಗಳಿಗೆ ಅತಿಮುಖ್ಯ ಸ್ಥಳವಾಗಿದ್ದು, ಬಾಲ್ಹ್ಯ ಎಂಬ ಋಷಿಯು ನಗ್ನ ಸಾಧುವಿನ ರೂಪದಲ್ಲಿ ಬಂದ ಶಿವನಿಗೆ ನೀಡಿದ ಶಾಪದಿಂದಾಗಿ ಈ ಸ್ಥಳದಲ್ಲಿ ಜ್ಯೋತಿರ್ಲಿಂಗದ ರೂಪದಲ್ಲಿ ನೆಲೆಸಿದ ಎಂಬುದು ಪ್ರತೀತಿ.
ಘೃಷ್ಣೇಶ್ವರ ದೇವಾಲಯ – ಮಹಾರಾಷ್ಟ ರಾಜ್ಯದ ಔರಂಗಾಬಾದ್ ಬಳಿಯಲ್ಲಿ ಈ ದೇವಲಯವನ್ನು ಕಾಣಬಹುದಾಗಿದ್ದು, ಕುಸುಮೇಶ್ವರ ದೇವಾಲಯ ಎಂಬ ಹೆಸರಿನಿಂದಲೂ ಈ ದೇಗುಲವನ್ನು ಕರೆಯಲಾಗುತ್ತದೆ. ಕುಸುಮಾ ಎಂಬ ಶಿವಭಕ್ತೆಯ ಮಗನು ತ್ನ್ನ ಸ್ವಂತ ಅಕ್ಕನಿಂದಲೇ ಹತ್ಯೆಯಾದ ಕಾರಣದಿಂದ ಮನನೊಂದು ಶಿವನನ್ನು ಪ್ರಾರ್ಥಿಸಿದ ಪರಿಣಾಮ ಶಿವನು ಪ್ರತ್ತ್ಯಕ್ಷನಾಗಿ ಈಕೆಯ ಮಗನನ್ನು ಬದುಕಿಸಿದ ಕಾರಣ ಈ ದೇವಾಲಯಕ್ಕೆ ಕುಸುಮೇಶ್ವರ ದೇವಾಲಯವೆಂಬ ಹೆಸರು ಬಂದಿತು.ಎಲ್ಲೋರಾ ಗುಹೆಗಳಿಗೆ ಸಮೀಪದಲ್ಲಿಯೇ ಈ ದೇವಾಲಯವನ್ನು ಕಾಣಬಹುದಾಗಿದೆ.
ರಾಮೇಶ್ವರ ದೇವಾಲಯ – ತಮಿಳುನಾಡು ರಾಜ್ಯದಲ್ಲಿನ ರಾಮೇಶ್ವರಂ ಎಂಬಲ್ಲಿ ಈ ದೇವಾಲಯವನ್ನು ಕಾಣಬಹುದಾಗಿದೆ. ಮಹಾಶಿವಭಕ್ತನಾದ ರಾವಣನನ್ನು ಕೊಂದ ಪಾಪದ ಪರಿಹಾರಾರ್ಥವಾಗಿ ಶಿವಲಿಂಗವನ್ನು ಪ್ರತಿಷ್ಟಾಪಿಸಲು ನಿರ್ಧರಿಸಿದ ರಾಮ ಹನುಮನಿಗೆ ಉತ್ತಮ ಶಿಲೆಯನ್ನು ತರಲು ಆದೇಶಿಸಿದನಾದರೂ, ಹನುಮನು ಶಿಲೆ ತರುವ ವೇಳೆಗೆ ಲಿಂಗ ಪ್ರತಿಷ್ಟಾಪನೆ ಮುಗಿದಿದ್ದ ಕಾರಣ ಹನುಮ ತಂದ ಲಿಂಗಕ್ಕೆ ಪ್ರಥಮ ಪೂಜೆ ಸಲ್ಲಬೇಕೆಂದು ಆದೇಶಿಸಿದನು. ರಾಮನಿಂದ ನಿರ್ಮಾಣಾವಾದ ದೇವಾಲಯ ಹಾಗೂ ಪ್ರತಿಷ್ಟಾಪಿತಗೊಂಡ ಲಿಂಗವಾದ ಕಾರಣ ಈ ದೇವಾಲಯಕ್ಕೆ ರಮೇಶ್ವರ ದೇವಾಲಯಾವೆಂಬ ಹೆಸರು ಬಂದಿದೆಯೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಮುಕ್ತಿಧಾಮಗಳು ಯಾವುವು?
ಒಟ್ಟು ಏಳು ಮುಕ್ತಿಧಾಮಗಳನ್ನು ಕಾಣಬಹುದು. ಅವುಗಳೆಂದರೆ…
  1. ಮಥುರಾ
  2. ಅಯೋಧ್ಯಾ
  3. ಬನಾರಸ್
  4. ಕಂಚಿ
  5. ದ್ವಾರಕಾನಗರ
  6. ಹರಿದ್ವಾರ
  7. ಉಜ್ಜೈನಿ
ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನು ಪರಮಶ್ರೇಷ್ಟ ನೈವೇದ್ಯದ ಫಲಗಳೆಂದು ಪರಿಗಣಿಸಲಾಗುತ್ತದೆ ಏಕೆ? ಯಾವುದೇ ಹಣ್ಣಿನ ಸಸಿಗಳೂ ಸಹ ಬೀಜದಿಂದ ಹುಟ್ಟುವವುಗಳಾಗಿದ್ದು, ತಿಂದು ಎಂಜಲು ಮಾಡಿ ಬಿಸಾಡಿದ ಬೀಜಗಳಿಂದ ಹುಟ್ಟುತ್ತವೆಯಾದ್ದರಿಂದ, ಯವುದೇ ಬೀಜರಹಿತವಾಗಿ ಹುಟ್ಟಿ ಬೆಳೆದು ಫಲ ನೀಡುವ ವೃಕ್ಷಗಳಾದ ಬಾಳೆ ಹಾಗೂ ತೀಂಗಿನಿಂದ ಪಡೆಯುವ ಫಲಗಳು ಪರಮಶ್ರೇಷ್ಟ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಬಾಳೆಯ ಬುಡದಲ್ಲಿಯೇ ಸಸಿಗಳು ಹುಟ್ಟುತ್ತವೆಯೇ ಹೊರತು ಯಾವುದೇ ಬಳೆ ಬೀಜವನ್ನು ಪಡೆಯಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿಯೇ ತೆಂಗಿನ ಕಾಯಿಯನ್ನು ಸಿಪ್ಪೆಸಹಿತವಾಗಿ ಮಣ್ಣಿನಲ್ಲಿ ಹೂತರೆ ಮಾತ್ರವೇ ತೆಂಗಿನಸಸಿಯನ್ನು ಪಡೆಯಬಹುದಾಗಿದ್ದು, ಈ ಎರೆಡು ಫಲಗಳು ಎಂಜಲುರಹಿತವಾಗಿವೆ.ಆದುದರಿಂದಲೇ ನೈವೇದ್ಯಕ್ಕೆ ಈ ಎರೆಡು ಫಲಗಳು ಪರಮಶ್ರೇಷ್ಟವಾಗಿವೆ.
ಅನ್ನಪೂರ್ಣ ದೇವಿಯು ಉಗಮವಾದ ಬಗೆ ಹೇಗೆ?
ಒಮ್ಮೆ ಶಿವನ ಮೂರೂ ಕಣ್ಣುಗಳನ್ನು ಪಾರ್ವತಿಯು ತನ್ನ ಕೈಗಳಿಂದ ಮುಚ್ಚಿಬಿಟ್ಟಳು. ಶಿವನ ಮೂರು ಕಣ್ಣುಗಳೆಂದರೆ ಸೂರ್ಯ, ಚಂದ್ರ ಹಾಗೂ ಅಗ್ನಿ ಆಗಿದ್ದು, ಇಡೀ ಜಗತ್ತಿಗೆ ಬೆಳಕನ್ನು ದಯಪಾಲಿಸುವ ಈ ಮೂರೂ ಕಣ್ಣುಗಳನ್ನು ಮುಚ್ಚಿದ್ದರಿಂದ ಬೆಳಕಿಲ್ಲದೆ ಇಡೀ ಜಗತ್ತು ಅಂಧಕಾರಮಯವಾಯಿತು, ಆಹಾರದ ಉತ್ಪಾದನೆಯಿಲ್ಲದಂತಾಯಿತು. ಭೀಕರ ಬರಗಾಲ ಆವರಿಸಿತು. ಇದಲ್ಲದೆ ಪಾರ್ವತಿಯ ಮುಖವು ಕಪ್ಪನೆಯ ಬಣ್ಣಕ್ಕೆ ತಿರುಗಿತು. ಈ ಸಮಸ್ಯೆಯನ್ನು ನಿವಾರಿಸುವ ಬಗೆ ಹೇಗೆಂದು ಪಾರ್ವತಿಯು ಈಶ್ವರನಲ್ಲಿ ಕೇಳಿಕೊಂಡಾಗ, ಶಿವನು ನೀನು ಅನ್ನಪೂರ್ಣೆಯ ರೂಪವನ್ನು ತಾಳಿ ಅನ್ನದಾನವನ್ನು  ಮಾಡಬೇಕೆಂದು, ಇದರಿಂದ ಕ್ರಮೇಣ ಈ ಸಮಸ್ಯೆ ನಿವಾರಣೆಯಾಗುವುದೆಂದು ತಿಳಿಸಿದನು. ಮೊಟ್ಟಮೊದಲಿಗೆ ಶಿವನೇ ಅನ್ನಪೂರ್ಣೆಯಲ್ಲಿ ಬಿಕ್ಷೆಯನ್ನು ಬೇಡಿದನು. ಅಂದಿನಿಂದ ಇಂದಿನವರೆಗೂ ಪಾರ್ವತಿದೇವಿಯೇ ಅನ್ನಪೂರ್ಣೆಯಾಗಿ ಜಗತ್ತಿನ ಹಸಿವನ್ನು ನೀಗಿಸುತ್ತಿದ್ದಾಳೆ.
ಆಂಜನೇಯನಿಗೆ ಹನುಮಂತ ಎಂಬ ಹೆಸರು ಬಂದದ್ದು ಹೇಗೆ?
ಬಾಲ್ಯವಸ್ಥೆಯಲ್ಲಿದ್ದಾಗ ಆಂಜನೇಯನು ಚೆಂಡು ಎಂದು ತಿಳಿದು ಸೂರ್ಯನನ್ನು ಹಿಡಿಯಲು ಹೋದಾಗ ಸಿಟ್ಟಿಗೆದ್ದ ಸೂರ್ಯದೇವ್ನು ಆಂಜನೇಯನ ದವಡೆಗೆ ಗುದ್ದು ನೀಡಿದನು. ಸಂಸ್ಕೃತದಲ್ಲಿ ಹನು ಎಂದರೆ ದವಡೆಯಾಗಿದ್ದು, ಆಂಜನೇಯನ ದವಡೆಗೆ ಸೂರ್ಯದೇವನು ಮಂಥನ ಮಾಡಿದ್ದರಿಂದ ಹನುಮಂತ ಎಂಬ ಹೆಸರು ಬಂದಿತು.
ಮಹಾಬಲೇಶ್ವರಕ್ಕೆ ಆ ಹೆಸರು ಬರಲು ಕಾರಣವೇನು?
ಮಹಾ ಬ್ರಾಹ್ಮಣನಾದ ರಾವಣನು ತನ್ನ ನಿಷ್ಟೆಯುತ ಉಗ್ರ  ತಪಸ್ಸಿನಿಂದ ಶಿವನನ್ನು ಮೆಚ್ಚಿಸಿ ಶಿವನ ಆತ್ಮಲಿಂಗವನ್ನು ಪಡೆದನು. ಶಿವನ ಸೂಚನೆಯ ಪ್ರಕಾರ ಅದನ್ನು ದಾರಿಯ ಮಧ್ಯದಲ್ಲಿ ಎಲ್ಲಿಯೂ ನೆಲಕ್ಕೆ ಸ್ಪರ್ಶಿಸಕೂಡದು. ಒಂದೊಮ್ಮೆ ಸ್ಪರ್ಶಿಸಿದಲ್ಲಿ ಅದು ಅಲ್ಲಿಯೇ ಭೂಸ್ಥಾಪನೆಗೊಳ್ಳುತ್ತದೆ. ಆತ್ಮಲಿಂಗವನ್ನು ಪಡೆದ ರಾವಣನು ಲಂಕಗೆ ತೆರಳುತ್ತಿದ್ದಾಗ ಸಾಯಂಕಾಲದ ಸಂಧ್ಯಾವಂದನೆಯ ಸಮಯವಾಯಿತು. ರಾವನನು ಸಂಧ್ಯಾವಂದನೆಯ ಕರ್ಮವನ್ನು ನಿಲ್ಲಿಸುವಂತಿರಲಿಲ್ಲ. ಅದೇ ಸಮಯಕ್ಕೆ ಪುಟ್ಟ ಬಾಲಕನ ರೂಪದಲ್ಲಿ ಬಂದ ಗಣಪತಿಯ ಕೈಗೆ ಆತ್ಮಲಿಂಗವನ್ನು ನೀಡಿ ಸಂಧ್ಯಾವಂದನೆಗೆ ತೆರಳಿದನು. ಈ ಮೊದಲೇ ನಿರ್ಧರಿಸಿದಂತೆ ಗಣೇಶನು ಇನ್ನೇನು ಸಂಧ್ಯಾವಂದನೆ ಮುಗಿಯುವ ಹೊತ್ತಿನಲ್ಲಿ ಆತ್ಮಲಿಂಗದ ಭಾರ ತಾಳೆನೆಂದು ನೆಲದ ಮೇಲಿಟ್ಟನು. ಯಾವಾಗ ಅದು ಭೂ-ಸ್ಪರ್ಶವಾಯಿತೋ ಅದು ಅಲ್ಲಿಯೇ ಭೂ ಸ್ಥಾಪಿತವಾಯಿತು. ರಾವಣ ಮಹಾ ಪರಾಕ್ರಮಿಯಾಗಿದ್ದರೂ ಸಹ ಎಷ್ಟೇ ಪ್ರಯತ್ನಿಸಿದರೂ ಸಹ ಲಿಂಗವನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಇದರಿಂದಲೇ ಆ ಸ್ಥಳಕ್ಕೆ ಮಹಾಬಲೇಶ್ವರ ಎಂಬ ಹೆಸರು ಬಂದಿದೆ.
ಸ್ವಾಮಿ ಸುಬ್ರಮಣ್ಯ ದೇವರ ಇತರ ಹೆಸರುಗಳುಮುರುಗನ್, ಸ್ಕಂದ, ಕಂದ, ಸುಬ್ರಾಮಣ್ಯ, ಶಣ್ಮುಖ, ಸರವಣ, ಕಾರ್ತಿಕೇಯ, ಗುಹ, ವೇಲಾಯುಧನ್,  ಕುಮಾರಸ್ವಾಮಿ

No comments: